ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಿಶ್ಚಯವಾಗಿಯ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸತ್ಯವಿಶ್ವಾಸಿಯು ಈರ್ಷ್ಯೆಪಡುವಂತೆ, ಕೋಪಿಸುವಂತೆ ಮತ್ತು ದ್ವೇಷಿಸುವಂತೆ ಅಲ್ಲಾಹು ಕೂಡ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹು ರಕ್ಷಣಾತ್ಮಕ ಈರ್ಷ್ಯೆಯನ್ನು ಹೊಂದಿದ್ದಾನೆ. ಒಬ್ಬ ಸತ್ಯವಿಶ್ವಾಸಿಯೂ ಸಹ ರಕ್ಷಣಾತ್ಮಕ ಈರ್ಷ್ಯೆಯನ್ನು ಹೊಂದಿದ್ದಾನೆ. ಸತ್ಯವಿಶ್ವಾಸಿಯು ಅಲ್ಲಾಹು ನಿಷೇಧಿಸಿದ್ದನ್ನು ಮಾಡುವುದು ಅಲ್ಲಾಹನ ಈರ್ಷ್ಯೆಯನ್ನು ಉದ್ರೇಕಿಸುತ್ತದೆ.”

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಏಳು ವಿನಾಶಕಾರಿ ಪಾಪಗಳಿಂದ ದೂರವಿರಿ” ಅವರು (ಸಂಗಡಿಗರು) ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು?” ಅವರು ಹೇಳಿದರು: “ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು; ಮಾಟಗಾರಿಕೆ (ವಾಮಾಚಾರ) ಮಾಡುವುದು; ಅಲ್ಲಾಹು (ಹತ್ಯೆ ಮಾಡುವುದು) ನಿಷೇಧಿಸಿದ ಮನುಷ್ಯ ಜೀವಿಯನ್ನು ನೈತಿಕ ಹಕ್ಕಿನಿಂದಲ್ಲದೆ ಹತ್ಯೆ ಮಾಡುವುದು; ಬಡ್ಡಿ ತಿನ್ನುವುದು; ಅನಾಥರ ಆಸ್ತಿಯನ್ನು ತಿನ್ನುವುದು; ಯುದ್ಧಭೂಮಿಯಿಂದ ಪಲಾಯನ ಮಾಡುವುದು; ಮತ್ತು ಪರಿಶುದ್ಧ, ಮುಗ್ಧ ಹಾಗೂ ಸತ್ಯವಿಶ್ವಾಸಿಗಳಾದ ಮಹಿಳೆಯರ ಮೇಲೆ ದುರಾರೋಪ ಹೊರಿಸುವುದು.”

ಅಬೂ ಬಕ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮಹಾಪಾಪಗಳಲ್ಲಿ ಅತಿದೊಡ್ಡ ಪಾಪದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?" ಅವರು ಇದನ್ನು ಮೂರು ಬಾರಿ ಪುನರುಚ್ಛರಿಸಿದರು. ಸಹಾಬಿಗಳು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಿಳಿಸಿಕೊಡಿ." ಅವರು ಹೇಳಿದರು: "ಅಲ್ಲಾಹನೊಡನೆ ಸಹಭಾಗಿತ್ವ ಮಾಡುವುದು ಮತ್ತು ತಂದೆ-ತಾಯಿಗೆ ಅವಿಧೇಯತೆ ತೋರುವುದು." ಒರಗಿ ಕುಳಿತಿದ್ದ ಅವರು ನೇರವಾಗಿ ಕುಳಿತು ಹೇಳಿದರು: "ಮತ್ತು ಸುಳ್ಳು ಹೇಳಿಕೆ ನೀಡುವುದು." "ಅವರು ಮೌನ ವಹಿಸಿದ್ದರೆ ಚೆನ್ನಾಗಿತ್ತು" ಎಂದು ನಾವು ಹೇಳುವ ತನಕ ಅವರು ಪುನರುಚ್ಛರಿಸುತ್ತಲೇ ಇದ್ದರು.

ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮಹಾಪಾಪಗಳು ಎಂದರೆ: ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದು, ಮಾತಾಪಿತರಿಗೆ ಅವಿಧೇಯತೆ ತೋರುವುದು, ನರಹತ್ಯೆ ಮಾಡುವುದು ಮತ್ತು ಸುಳ್ಳು ಪ್ರಮಾಣ ಮಾಡುವುದು."

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪುನರುತ್ಥಾನ ದಿನದಂದು ಜನರ ನಡುವೆ ತೀರ್ಪು ನೀಡಲಾಗುವ ಪ್ರಪ್ರಥಮ ವಿಷಯವು ರಕ್ತಪಾತವಾಗಿದೆ."

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "(ಮುಸಲ್ಮಾನರೊಂದಿಗೆ) ಒಪ್ಪಂದದಲ್ಲಿರುವ ವ್ಯಕ್ತಿಯನ್ನು ಯಾರಾದರೂ ಕೊಂದರೆ ಅವನು ಸ್ವರ್ಗದ ಪರಿಮಳವನ್ನು ಕೂಡ ಅನುಭವಿಸಲಾರ. ಅದರ ಪರಿಮಳವನ್ನು ನಲ್ವತ್ತು ವರ್ಷಗಳ ದೂರದಿಂದಲೇ ಅನುಭವಿಸಬಹುದಾಗಿದೆ."

ಜುಬೈರ್ ಬಿನ್ ಮುತ್‌ಇಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಕುಟುಂಬ ಸಂಬಂಧ ಕಡಿಯುವವನು ಸ್ವರ್ಗವನ್ನು ಪ್ರವೇಶಿಸುವುದಿಲ್ಲ.”

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಯಾರು ತನ್ನ ಜೀವನೋಪಾಯವು ವಿಶಾಲವಾಗಲು ಮತ್ತು ತನ್ನ ಆಯುಷ್ಯವು ದೀರ್ಘವಾಗಲು ಬಯಸುತ್ತಾನೋ ಅವನು ಕುಟುಂಬ ಸಂಬಂಧಗಳನ್ನು ಜೋಡಿಸಲಿ.”

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸಂಬಂಧಿಕರು ಸಂಬಂಧ ಜೋಡಿಸಿದರೆ ಮಾತ್ರ ಸಂಬಂಧ ಜೋಡಿಸುವವನು ಕುಟುಂಬ ಸಂಬಂಧವನ್ನು ಕಾಪಾಡುವವನಲ್ಲ. ಬದಲಿಗೆ, ಸಂಬಂಧಿಕರು ಸಂಬಂಧವನ್ನು ಕಡಿದಾಗ ಅವರೊಡನೆ ಸಂಬಂಧ ಜೋಡಿಸುವವನೇ ಕುಟುಂಬ ಸಂಬಂಧವನ್ನು ಕಾಪಾಡುವವನು.”

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಪರದೂಷಣೆ ಏನೆಂದು ನಿಮಗೆ ತಿಳಿದಿದೆಯೇ?” ಅನುಯಾಯಿಗಳು ಉತ್ತರಿಸಿದರು: “ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು.” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “(ಪರದೂಷಣೆ ಎಂದರೆ) ನಿನ್ನ ಸಹೋದರನ ಬಗ್ಗೆ ಅವನಿಗೆ ಇಷ್ಟವಿಲ್ಲದ ಮಾತನ್ನು ಹೇಳುವುದು.” ಆಗ ಒಬ್ಬರು ಕೇಳಿದರು: “ಒಂದು ವೇಳೆ ನಾನು ಹೇಳುವ ಸಂಗತಿ ಅವನಲ್ಲಿದ್ದರೆ?” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: “ಅದು ಅವನಲ್ಲಿದ್ದರೆ ನೀನು ಅವನ ಬಗ್ಗೆ ಪರದೂಷಣೆ ಮಾಡಿರುವೆ. ಅದು ಅವನಲ್ಲಿಲ್ಲದಿದ್ದರೆ ನೀನು ಅವನ ಮೇಲೆ ಸುಳ್ಳಾರೋಪ ಹೊರಿಸಿರುವೆ.”

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಎಲ್ಲಾ ಮಾದಕ ದ್ರವ್ಯಗಳು ಮದ್ಯವಾಗಿವೆ ಮತ್ತು ಎಲ್ಲಾ ಮಾದಕ ದ್ರವ್ಯಗಳು ನಿಷಿದ್ಧವಾಗಿವೆ. ಯಾರು ಇಹಲೋಕದಲ್ಲಿ ಮದ್ಯ ಸೇವಿಸುತ್ತಾರೋ, ಮತ್ತು ಅದರ ಚಟಕ್ಕೆ ಬಲಿಯಾಗಿ ಪಶ್ಚಾತ್ತಾಪಪಡದೆ ಸಾಯುತ್ತಾರೋ, ಅವರು ಪರಲೋಕದಲ್ಲಿ ಅದನ್ನು ಕುಡಿಯಲಾರರು."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ತೀರ್ಪಿಗಾಗಿ ಲಂಚ ನೀಡುವವರನ್ನು ಮತ್ತು ಲಂಚ ಪಡೆಯುವವರನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಪಿಸಿದ್ದಾರೆ."