/ ಅಲ್ಲಾಹು ದಾಸನಿಗೆ ಅತಿನಿಕಟನಾಗುವುದು ರಾತ್ರಿಯ ಕೊನೆಯ ಮೂರನೇ ಭಾಗದಲ್ಲಿ

ಅಲ್ಲಾಹು ದಾಸನಿಗೆ ಅತಿನಿಕಟನಾಗುವುದು ರಾತ್ರಿಯ ಕೊನೆಯ ಮೂರನೇ ಭಾಗದಲ್ಲಿ

ಅಬೂ ಉಮಾಮ ರಿಂದ ವರದಿ. ಅವರು ಹೇಳಿದರು: ಅಮ್ರ್ ಬಿನ್ ಅಬಸ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನನಗೆ ತಿಳಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು: "ಅಲ್ಲಾಹು ದಾಸನಿಗೆ ಅತಿನಿಕಟನಾಗುವುದು ರಾತ್ರಿಯ ಕೊನೆಯ ಮೂರನೇ ಭಾಗದಲ್ಲಿ. ಆದ್ದರಿಂದ ಆ ಸಮಯದಲ್ಲಿ ಅಲ್ಲಾಹನನ್ನು ಸ್ಮರಿಸುವವರಲ್ಲಿ ಸೇರಲು ನಿನಗೆ ಸಾಧ್ಯವಾಗುವುದಾದರೆ ಸೇರಿಕೋ."
رواه أبو داود والترمذي والنسائي

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ಪರಿಪಾಲಕನು (ಅಲ್ಲಾಹು) ದಾಸನಿಗೆ ಅತ್ಯಂತ ಹತ್ತಿರವಾಗುವುದು ರಾತ್ರಿಯ ಕೊನೆಯ ಮೂರನೇ ಭಾಗದಲ್ಲಿ. ಆದ್ದರಿಂದ ಓ ಸತ್ಯವಿಶ್ವಾಸಿಗಳೇ, ಆ ಸಮಯದಲ್ಲಿ ಅಲ್ಲಾಹನನ್ನು ಆರಾಧಿಸುವವರು, ನಮಾಝ್ ಮಾಡುವವರು, ಸ್ಮರಿಸುವವರು, ಪಶ್ಚಾತ್ತಾಪಪಡುವವರು ಮುಂತಾದವರೊಡನೆ ಸೇರಿಕೊಳ್ಳುವ ಭಾಗ್ಯ ಮತ್ತು ಸಾಮರ್ಥ್ಯ ನಿನಗೆ ದೊರಕಿದರೆ ಅವರೊಡನೆ ಸೇರಿಕೋ. ಏಕೆಂದರೆ ಅದು ಅತ್ಯಗತ್ಯವಾಗಿ ಸದುಪಯೋಗಪಡಿಸಬೇಕಾದ ಮತ್ತು ಪರಿಶ್ರಮಪಡಬೇಕಾದ ಸಮಯವಾಗಿದೆ.

Hadeeth benefits

  1. ರಾತ್ರಿಯ ಕೊನೆಯ ಸಮಯದಲ್ಲಿ ಅಲ್ಲಾಹನನ್ನು ಸ್ಮರಿಸಲು ಮುಸಲ್ಮಾನರನ್ನು ಪ್ರೋತ್ಸಾಹಿಸಲಾಗಿದೆ.
  2. ದೇವಸ್ಮರಣೆ, ಪ್ರಾರ್ಥನೆ ಮತ್ತು ನಮಾಝನ್ನು ಅವಲಂಬಿಸಿ ಸಮಯಗಳ ಶ್ರೇಷ್ಠತೆಯಲ್ಲಿ ಹೆಚ್ಚು ಕಡಿಮೆಯಾಗುತ್ತದೆ.
  3. "ಅಲ್ಲಾಹು ದಾಸನಿಗೆ ಅತಿನಿಕಟನಾಗುವುದು" ಎಂಬ ಈ ವಚನ ಮತ್ತು "ದಾಸನು ಅಲ್ಲಾಹನಿಗೆ ಅತಿನಿಕಟನಾಗುವುದು ಅವನು ಸಾಷ್ಟಾಂಗ ಮಾಡುವಾಗ" ಎಂಬ ವಚನದ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾ ಮೀರಕ್ ಹೇಳಿದರು: "ಇಲ್ಲಿ ಅಲ್ಲಾಹು ದಾಸನಿಗೆ ಅತಿನಿಕಟವಾಗುವ ಸಮಯದ ಬಗ್ಗೆ, ಅಂದರೆ ರಾತ್ರಿಯ ಕೊನೆಯ ಮೂರನೇ ಭಾಗದ ಬಗ್ಗೆ ವಿವರಿಸಲಾಗಿದೆ. ಆದರೆ ಅಲ್ಲಿ ದಾಸನು ಅಲ್ಲಾಹನಿಗೆ ಅತಿನಿಕಟನಾಗುವ ಸ್ಥಿತಿಯ ಬಗ್ಗೆ, ಅಂದರೆ ಅವನು ಸಾಷ್ಟಾಂಗ ಮಾಡುತ್ತಿರುವ ಸ್ಥಿತಿಯ ಬಗ್ಗೆ ವಿವರಿಸಲಾಗಿದೆ."