/ ಅವುಗಳನ್ನು ಬಿಟ್ಟುಬಿಡಿ. ನಾವು ಅವುಗಳನ್ನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಧರಿಸಿದ್ದೆ

ಅವುಗಳನ್ನು ಬಿಟ್ಟುಬಿಡಿ. ನಾವು ಅವುಗಳನ್ನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಧರಿಸಿದ್ದೆ

ಮುಗೀರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಒಂದು ಯಾತ್ರೆಯಲ್ಲಿ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆ. ಆಗ ನಾನು ಅವರ ಪಾದರಕ್ಷೆಗಳನ್ನು ಕಳಚಲು ಮುಂದಾದೆ. ಆಗ ಅವರು ಹೇಳಿದರು: "ಅವುಗಳನ್ನು ಬಿಟ್ಟುಬಿಡಿ. ನಾವು ಅವುಗಳನ್ನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಧರಿಸಿದ್ದೆ." ನಂತರ ಅವರು ಅವುಗಳ ಮೇಲೆ ಸವರಿದರು.
متفق عليه

ವಿವರಣೆ

ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಯಾತ್ರೆಯಲ್ಲಿದ್ದಾಗ ವುದೂ (ಅಂಗಸ್ನಾನ) ನಿರ್ವಹಿಸಿದರು. ಅವರು ಕಾಲು ತೊಳೆಯುವ ಹಂತಕ್ಕೆ ತಲುಪಿದಾಗ, ಅವರು ಕಾಲು ತೊಳೆಯುವುದಕ್ಕಾಗಿ ಅವರ ಕಾಲಲ್ಲಿದ್ದ ಪಾದರಕ್ಷೆಯನ್ನು ಕಳಚಲು ಮುಗೀರ ಬಿನ್ ಶುಅಬ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಕೈ ಚಾಚಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವುಗಳನ್ನು ಬಿಟ್ಟುಬಿಡಿ, ಕಳಚಬೇಡಿ. ನಾನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಕಾಲುಗಳಿಗೆ ಪಾದರಕ್ಷೆಗಳನ್ನು ಧರಿಸಿದ್ದೆ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲುಗಳನ್ನು ತೊಳೆಯುವ ಬದಲು ಪಾದರಕ್ಷೆಗಳ ಮೇಲೆ ಸವರಿದರು.

Hadeeth benefits

  1. ಸಣ್ಣ ಅಶುದ್ಧಿಗಾಗಿ ವುದೂ (ಅಂಗಸ್ನಾನ) ನಿರ್ವಹಿಸುವಾಗ ಪಾದರಕ್ಷೆಗಳ ಮೇಲೆ ಸವರುವುದಕ್ಕೆ ಅನುಮತಿಯಿದೆ. ಆದರೆ, ದೊಡ್ಡ ಅಶುದ್ಧಿಗಾಗಿ ಸ್ನಾನ ಮಾಡುವಾಗ ಕಾಲುಗಳನ್ನು ತೊಳೆಯುವುದು ಕಡ್ಡಾಯವಾಗಿದೆ.
  2. ಕೈಯನ್ನು ಒದ್ದೆ ಮಾಡಿಕೊಂಡು ಪಾದರಕ್ಷೆಯ ಮೇಲ್ಭಾಗವನ್ನು ಒಂದು ಬಾರಿ ಮಾತ್ರ ಸವರಬೇಕು. ಅಡಿಭಾಗವನ್ನು ಸವರಬಾರದು.
  3. ಪಾದರಕ್ಷೆಗಳ ಮೇಲೆ ಸವರಲು ಕೆಲವು ಷರತ್ತುಗಳಿವೆ: ಕಾಲುಗಳನ್ನು ನೀರಿನಿಂದ ತೊಳೆಯುವುದು ಸೇರಿದಂತೆ ಪೂರ್ಣವಾಗಿ ವುದೂ ನಿರ್ವಹಿಸಿದ ಬಳಿಕ ಪಾದರಕ್ಷೆಗಳನ್ನು ಧರಿಸಿರಬೇಕು. ಪಾದರಕ್ಷೆಯು ಶುದ್ಧವಾಗಿರಬೇಕು. ಪಾದದ ಕಡ್ಡಾಯ ಭಾಗವನ್ನು ಅದು ಮುಚ್ಚಿಕೊಂಡಿರಬೇಕು. ಸವರಬೇಕಾದುದು ಸಣ್ಣ ಅಶುದ್ಧಿಗಾಗಿ (ವುದೂ ನಿರ್ವಹಿಸುವಾಗ) ಮಾತ್ರ. ಜನಾಬತ್ (ಕಡ್ಡಾಯ ಸ್ನಾನ) ಮುಂತಾದ ಸ್ನಾನವು ಕಡ್ಡಾಯವಾಗುವ ಸಂದರ್ಭಗಳಲ್ಲಿ ಸವರಬಾರದು. ಸವರುವುದು ಧರ್ಮಶಾಸ್ತ್ರವು ನಿಗದಿಪಡಿಸಿದ ಸಮಯದ ಒಳಗಾಗಿರಬೇಕು. ಅಂದರೆ ಊರಿನಲ್ಲಿರುವವರು ಒಂದು ದಿನ ರಾತ್ರಿ (24 ತಾಸುಗಳು) ಮತ್ತು ಯಾತ್ರಿಕರು ಮೂರು ದಿನ ರಾತ್ರಿ (72 ತಾಸುಗಳು).
  4. ಚರ್ಮದ ಪಾದರಕ್ಷೆಗಳಂತೆ ಕಾಲುಗಳನ್ನು ಮುಚ್ಚುವ ಸಾಕ್ಸ್ ಮುಂತಾದವುಗಳ ಮೇಲೂ ಸವರಬಹುದು.
  5. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮ ಸ್ವಭಾವ ಮತ್ತು ಬೋಧನಾಶೈಲಿಯನ್ನು ಗಮನಿಸಬಹುದು. ಅವರು ಮುಗೀರರಿಗೆ ಪಾದರಕ್ಷೆಗಳನ್ನು ಕಳಚಲು ಅಡ್ಡಿಪಡಿಸಿದಾಗ, ಅವರ ಮನಸ್ಸಿಗೆ ನೋವಾಗಿದ್ದರೆ ಸಮಾಧಾನ ಪಡಿಸಲು ಮತ್ತು ನಿಯಮವನ್ನು ತಿಳಿಸಿಕೊಡಲು ತಾನು ಅದನ್ನು ಶುದ್ಧಿಯ ಸ್ಥಿತಿಯಲ್ಲಿ ಧರಿಸಿದ್ದನೆಂಬ ಅದರ ಕಾರಣವನ್ನು ವಿವರಿಸಿಕೊಟ್ಟರು.