/ (ಪುನರುತ್ಥಾನ ದಿನದಂದು) ಸಾವನ್ನು ಕಪ್ಪು ಮತ್ತು ಬಿಳಿ ಬಣ್ಣವಿರುವ ಟಗರಿನ ರೂಪದಲ್ಲಿ ತರಲಾಗುವುದು

(ಪುನರುತ್ಥಾನ ದಿನದಂದು) ಸಾವನ್ನು ಕಪ್ಪು ಮತ್ತು ಬಿಳಿ ಬಣ್ಣವಿರುವ ಟಗರಿನ ರೂಪದಲ್ಲಿ ತರಲಾಗುವುದು

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "(ಪುನರುತ್ಥಾನ ದಿನದಂದು) ಸಾವನ್ನು ಕಪ್ಪು ಮತ್ತು ಬಿಳಿ ಬಣ್ಣವಿರುವ ಟಗರಿನ ರೂಪದಲ್ಲಿ ತರಲಾಗುವುದು. ಆಗ ಒಬ್ಬರು, "ಓ ಸ್ವರ್ಗವಾಸಿಗಳೇ!" ಎಂದು ಕೂಗಿ ಕರೆಯುವರು. ಆಗ ಸ್ವರ್ಗವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ಸ್ವರ್ಗವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅವರು, "ಓ ನರಕವಾಸಿಗಳೇ" ಎಂದು ಕೂಗಿ ಕರೆಯುವರು. ಆಗ ನರಕವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ನರಕವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅದನ್ನು ಕೊಯ್ಯಲಾಗುವುದು. ನಂತರ ಅವರು ಹೇಳುವರು: "ಓ ಸ್ವರ್ಗವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ. ಓ ನರಕವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: “ಮತ್ತು ಎಲ್ಲಾ ಕಾರ್ಯಗಳಿಗೂ ತೀರ್ಪು ನೀಡಲಾಗುವ ಆ ವ್ಯಥೆಯ ದಿನದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿರಿ. ಆದರೆ ಅವರು ನಿರ್ಲಕ್ಷ್ಯದಲ್ಲಿದ್ದಾರೆ.” [ಮರ್ಯಮ್ 39] ಇಹಲೋಕದ ಈ ಜನರು ನಿರ್ಲಕ್ಷ್ಯದಲ್ಲಿದ್ದಾರೆ. "ಮತ್ತು ಅವರ ವಿಶ್ವಾಸವಿಡುವುದಿಲ್ಲ." [ಮರ್ಯಮ್ 39]
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪುನರುತ್ಥಾನ ದಿನದಂದು ಸಾವನ್ನು ಕಪ್ಪು ಬಿಳುಪು ರೋಮಗಳಿರುವ ಟಗರಿನ ರೂಪದಲ್ಲಿ ತರಲಾಗುವುದು. ಆಗ ಒಬ್ಬರು ಕೂಗಿ ಹೇಳುವರು: "ಓ ಸ್ವರ್ಗವಾಸಿಗಳೇ!" ಆಗ ಸ್ವರ್ಗವಾಸಿಗಳು ತಮ್ಮ ಕತ್ತುಗಳನ್ನು ಮತ್ತು ತಲೆಗಳನ್ನು ಎತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ಅವರು ಹೇಳುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿ ತಿಳಿಯುವರು. ನಂತರ ಅವರು ಕೂಗಿ ಕರೆಯುವರು: "ಓ ನರಕವಾಸಿಗಳೇ!" ಆಗ ನರಕವಾಸಿಗಳು ತಮ್ಮ ಕತ್ತುಗಳನ್ನು ಮತ್ತು ತಲೆಗಳನ್ನು ಎತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ಅವರು ಹೇಳುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿ ತಿಳಿಯುವರು. ನಂತರ ಅದನ್ನು ಕೊಯ್ಯಲಾಗುವುದು. ನಂತರ ಅವರು ಕೂಗಿ ಹೇಳುವರು: "ಓ ಸ್ವರ್ಗವಾಸಿಗಳೇ! ನೀವು ಶಾಶ್ವತವಾಗಿ ಸ್ವರ್ಗದಲ್ಲಿರುವಿರಿ. ಇನ್ನು ನಿಮಗೆ ಸಾವಿಲ್ಲ. ಓ ನರಕವಾಸಿಗಳೇ! ನೀವು ಶಾಶ್ವತವಾಗಿ ನರಕದಲ್ಲಿರುವಿರಿ. ಇನ್ನು ನಿಮಗೆ ಸಾವಿಲ್ಲ." ಇದು ಸತ್ಯವಿಶ್ವಾಸಿಗಳಿಗೆ ದೊರೆಯುವ ಅನುಗ್ರಹಗಳಿಗೆ ಮತ್ತು ಸತ್ಯನಿಷೇಧಿಗಳಿಗೆ ದೊರೆಯುವ ಶಿಕ್ಷೆಗೆ ಒಂದು ಹೆಚ್ಚುವರಿ ಸೇರ್ಪಡೆಯಾಗಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಈ ವಚನವನ್ನು ಪಠಿಸಿದರು: “ಮತ್ತು ಎಲ್ಲಾ ಕಾರ್ಯಗಳಿಗೂ ತೀರ್ಪು ನೀಡಲಾಗುವ ಆ ವ್ಯಥೆಯ ದಿನದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿರಿ. ಆದರೆ ಅವರು ನಿರ್ಲಕ್ಷ್ಯದಲ್ಲಿದ್ದಾರೆ. ಮತ್ತು ಅವರು ವಿಶ್ವಾಸವಿಡುವುದಿಲ್ಲ.” [ಮರ್ಯಮ್ 39] ಪುನರುತ್ಥಾನ ದಿನದಂದು ಸ್ವರ್ಗವಾಸಿಗಳನ್ನು ಮತ್ತು ನರಕವಾಸಿಗಳನ್ನು ಬೇರ್ಪಡಿಸಲಾಗುತ್ತದೆ. ಪ್ರತಿಯೊಬ್ಬರು ತಮ್ಮ ತಮ್ಮ ಶಾಶ್ವತ ಠಿಕಾಣಿಗಳಿಗೆ ತೆರಳುತ್ತಾರೆ. ಆಗ ಕೆಡುಕು ಮಾಡಿದವರು ಒಳಿತು ಮಾಡಲಿಲ್ಲವಲ್ಲ ಎಂದು ಕೊರಗುವರು ಮತ್ತು (ಸತ್ಕರ್ಮಗಳಲ್ಲಿ) ಕೊರತೆ ಮಾಡಿದವರು ಹೆಚ್ಚು ಸತ್ಕರ್ಮಗಳನ್ನು ನಿರ್ವಹಿಸಲಿಲ್ಲವಲ್ಲ ಎಂದು ಅಲವತ್ತುಕೊಳ್ಳುವರು.

Hadeeth benefits

  1. ಪರಲೋಕದಲ್ಲಿ ಮನುಷ್ಯನು ಒಂದೋ ಸ್ವರ್ಗಕ್ಕೆ ಅಥವಾ ನರಕಕ್ಕೆ ಶಾಶ್ವತವಾಗಿ ಮರಳುತ್ತಾನೆ ಎಂದು ಈ ಹದೀಸ್ ತಿಳಿಸುತ್ತದೆ.
  2. ಈ ಹದೀಸಿನಲ್ಲಿ ಪುನರುತ್ಥಾನ ದಿನದ ಭಯಾನಕತೆಯ ಬಗ್ಗೆ ತೀವ್ರವಾಗಿ ಎಚ್ಚರಿಸಲಾಗಿದೆ ಮತ್ತು ಅದು ವ್ಯಥೆ ಹಾಗೂ ವಿಷಾದದ ದಿನವೆಂದು ಹೇಳಲಾಗಿದೆ.
  3. ಸ್ವರ್ಗವಾಸಿಗಳ ಸಂತೋಷವು ಶಾಶ್ವತವಾಗಿರುತ್ತದೆ ಮತ್ತು ನರಕವಾಸಿಗಳ ದುಃಖವು ಶಾಶ್ವತವಾಗಿರುತ್ತದೆ ಎಂದು ಈ ಹದೀಸ್ ತಿಳಿಸುತ್ತದೆ.