/ ಯಾರು ಆಜ್ಞಾಪಾಲನೆಯಿಂದ ಹಿಂದೆ ಸರಿದು, ಸಮಾಜದಿಂದ ಬೇರ್ಪಟ್ಟು, ಅದೇ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾನೋ, ಅವನು ಅಜ್ಞಾನಕಾಲದ ಸಾವನ್ನಪ್ಪಿದ್ದಾನೆ...

ಯಾರು ಆಜ್ಞಾಪಾಲನೆಯಿಂದ ಹಿಂದೆ ಸರಿದು, ಸಮಾಜದಿಂದ ಬೇರ್ಪಟ್ಟು, ಅದೇ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾನೋ, ಅವನು ಅಜ್ಞಾನಕಾಲದ ಸಾವನ್ನಪ್ಪಿದ್ದಾನೆ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಆಜ್ಞಾಪಾಲನೆಯಿಂದ ಹಿಂದೆ ಸರಿದು, ಸಮಾಜದಿಂದ ಬೇರ್ಪಟ್ಟು, ಅದೇ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾನೋ, ಅವನು ಅಜ್ಞಾನಕಾಲದ ಸಾವನ್ನಪ್ಪಿದ್ದಾನೆ. ಯಾರು ಅಂಧ ಪತಾಕೆಯ ಅಡಿಯಲ್ಲಿ ಯುದ್ಧ ಮಾಡುತ್ತಾ, ಜನಾಂಗೀಯತೆಗಾಗಿ ಕೋಪಗೊಳ್ಳುತ್ತಲೂ, ಜನಾಂಗೀಯತೆಯ ಕಡೆಗೆ ಕರೆಯುತ್ತಲೂ, ಜನಾಂಗೀಯತೆಯನ್ನು ಬೆಂಬಲಿಸುತ್ತಲೂ ಇರುತ್ತಾ ಅದೇ ಸ್ಥಿತಿಯಲ್ಲಿ ಸಾಯುತ್ತಾನೋ, ಅವನು ಅಜ್ಞಾನಕಾಲದ ಸಾವನ್ನಪ್ಪಿದ್ದಾನೆ. ಯಾರು ನನ್ನ ಸಮುದಾಯದ ವಿರುದ್ಧ ಬಂಡೆದ್ದು, ಅವರಲ್ಲಿರುವ ನೀತಿವಂತರಿಗೂ ದುಷ್ಟರಿಗೂ ಬಡಿಯುತ್ತಾನೋ, ಅವರಲ್ಲಿರುವ ಸತ್ಯವಿಶ್ವಾಸಿಗಳನ್ನು ಕೂಡ ಬಿಟ್ಟುಬಿಡುವುದಿಲ್ಲವೋ, ಮತ್ತು ಕರಾರು ಮಾಡಿಕೊಂಡವರ ಕರಾರನ್ನು ಸಹ ನೆರವೇರಿಸುವುದಿಲ್ಲವೋ, ಅವನು ನನಗೆ ಸೇರಿದವನಲ್ಲ ಮತ್ತು ನಾನು ಅವನಿಗೆ ಸೇರಿದವನಲ್ಲ."
رواه مسلم

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರು ಆಡಳಿತಗಾರರ ಆಜ್ಞಾಪಾಲನೆ ಮಾಡುವುದರಿಂದ ಹಿಂದೆ ಸರಿದು, ಆಡಳಿತಗಾರರಿಗೆ ಸರ್ವಾನುಮತದಿಂದ ಪ್ರತಿಜ್ಞೆ (ಬೈಅತ್) ಮಾಡಿದ ಮುಸ್ಲಿಂ ಸಮಾಜದಿಂದ ಬೇರ್ಪಟ್ಟು, ಆಜ್ಞಾಪಾಲನೆ ಮಾಡದ ಮತ್ತು ಸಮಾಜದಿಂದ ಬೇರ್ಪಟ್ಟ ಆ ಸ್ಥಿತಿಯಲ್ಲೇ ಸಾವನ್ನಪ್ಪುತ್ತಾರೋ, ಅವರು ಅಜ್ಞಾನಕಾಲದ ಜನರಂತೆ ಸಾವನ್ನಪ್ಪಿದ್ದಾರೆ. ಅಜ್ಞಾನಕಾಲದ ಜನರು ಅವರ ಮುಖಂಡರ ಆಜ್ಞೆಗಳನ್ನು ಪಾಲಿಸುತ್ತಿರಲಿಲ್ಲ ಮತ್ತು ಒಂದೇ ಗುಂಪಿಗೆ ಅಂಟಿಕೊಳ್ಳುತ್ತಿರಲಿಲ್ಲ. ಬದಲಿಗೆ, ಅವರು ಹಲವಾರು ಗುಂಪುಗಳಾಗಿ ಬೇರ್ಪಟ್ಟು ಪರಸ್ಪರ ಯುದ್ಧದಲ್ಲಿ ನಿರತರಾಗುತ್ತಿದ್ದರು. . ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದುವರಿದು ಹೇಳುವುದೇನೆಂದರೆ, ಸತ್ಯ ಮತ್ತು ಅಸತ್ಯವನ್ನು ಸ್ಪಷ್ಟವಾಗಿ ಬೇರ್ಪಡಿಸಿ ಗುರುತಿಸದ ಪತಾಕೆಯ ಅಡಿಯಲ್ಲಿ ಯುದ್ಧ ಮಾಡುವವರು, ಧರ್ಮ ಮತ್ತು ಸತ್ಯಕ್ಕಾಗಿ ಹೋರಾಡದೆ ಕೇವಲ ತಮ್ಮ ಕೋಮು ಅಥವಾ ಗೋತ್ರದ ಪಕ್ಷ ವಹಿಸಿ ಅದಕ್ಕಾಗಿ ಕೋಪಿಸುವವರು, ಸರಿಯಾದ ವೀಕ್ಷಣೆ ಅಥವಾ ಜ್ಞಾನವಿಲ್ಲದೆ ಪಕ್ಷಪಾತದ ಆಧಾರದಲ್ಲಿ ಹೋರಾಡುವವರು ಮುಂತಾದವರು ಆ ಸ್ಥಿತಿಯಲ್ಲೇ ಸತ್ತರೆ ಅವರ ಸಾವು ಅಜ್ಞಾನಕಾಲದ ಜನರ ಸಾವಿಗೆ ಸಮಾನವಾಗಿದೆ. ಅದೇ ರೀತಿ, ಮುಸ್ಲಿಂ ಸಮುದಾಯದ ವಿರುದ್ಧ ಬಂಡೇಳುವವರು, ಸಮುದಾಯದಲ್ಲಿರುವ ನೀತಿವಂತರನ್ನು ಮತ್ತು ದುಷ್ಟರನ್ನು ವಿವೇಚಿಸಿ ತಿಳಿಯದೆ ದಾಳಿ ಮಾಡುವವರು, ಶಿಕ್ಷೆಯ ಯಾವುದೇ ಭಯವಿಲ್ಲದೆ ಸತ್ಯವಿಶ್ವಾಸಿಗಳನ್ನು ಕೊಲ್ಲುವವರು, ಮುಸ್ಲಿಮೇತರರೊಂದಿಗೆ ಅಥವಾ ಆಡಳಿತಗಾರರೊಂದಿಗೆ ಮಾಡಿದ ಕರಾರುಗಳಿಗೆ ಯಾವುದೇ ಬೆಲೆ ಕಲ್ಪಿಸದೆ ಉಲ್ಲಂಘಿಸುವವರು—ಇಂತಹ ಕೃತ್ಯಗಳೆಲ್ಲವೂ ಮಹಾಪಾಪಗಳಾಗಿದ್ದು, ಅವುಗಳನ್ನು ಮಾಡುವವರು ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ.

Hadeeth benefits

  1. ಅಲ್ಲಾಹನ ಆಜ್ಞೋಲ್ಲಂಘನೆ ಮಾಡದ ರೀತಿಯಲ್ಲಿ ಆಡಳಿತಗಾರರನ್ನು ಅನುಸರಿಸುವುದು ಕಡ್ಡಾಯವಾಗಿದೆ.
  2. ಮುಖಂಡರ ವಿರುದ್ಧ ಬಂಡೆದ್ದು ಮುಸ್ಲಿಂ ಸಮಾಜದಿಂದ ಬೇರ್ಪಡುವವರಿಗೆ ಇದರಲ್ಲಿ ಕಠಿಣ ಎಚ್ಚರಿಕೆಯಿದೆ. ಅವರು ಇದೇ ಸ್ಥಿತಿಯಲ್ಲಿ ಸತ್ತರೆ ಅವರು ಅಜ್ಞಾನಕಾಲದ ಜನರು ಸಾಯುವ ರೀತಿಯಲ್ಲಿ ಸತ್ತಿದ್ದಾರೆ.
  3. ಪಕ್ಷಪಾತದಿಂದ ಹೋರಾಡುವುದನ್ನು ಈ ಹದೀಸ್ ವಿರೋಧಿಸುತ್ತದೆ.
  4. ಕರಾರು ಮತ್ತು ಒಪ್ಪಂದಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
  5. ಆಜ್ಞಾಪಾಲನೆ ಮಾಡುವುದರಿಂದ ಮತ್ತು ಸಮಾಜಕ್ಕೆ ಅಂಟಿಕೊಳ್ಳುವುದರಿಂದ ಯಥೇಷ್ಟ ಒಳಿತುಗಳು, ಸುರಕ್ಷತೆ, ಸಮಾಧಾನ ಮತ್ತು ಸ್ಥಿರತೆ ದೊರಕುತ್ತವೆ.
  6. ಅಜ್ಞಾನಕಾಲದ ಜನರ ವರ್ತನೆಗಳನ್ನು ಅನುಕರಿಸುವುದನ್ನು ವಿರೋಧಿಸಲಾಗಿದೆ.
  7. ಮುಸ್ಲಿಂ ಸಮಾಜಕ್ಕೆ ಅಂಟಿಕೊಂಡಿರಬೇಕೆಂದು ಆಜ್ಞಾಪಿಸಲಾಗಿದೆ.