/ ಇಸ್ಲಾಂ ಧರ್ಮವನ್ನು ಐದು (ಸ್ತಂಭಗಳ) ಮೇಲೆ ನಿರ್ಮಿಸಲಾಗಿದೆ

ಇಸ್ಲಾಂ ಧರ್ಮವನ್ನು ಐದು (ಸ್ತಂಭಗಳ) ಮೇಲೆ ನಿರ್ಮಿಸಲಾಗಿದೆ

ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಸ್ಲಾಂ ಧರ್ಮವನ್ನು ಐದು (ಸ್ತಂಭಗಳ) ಮೇಲೆ ನಿರ್ಮಿಸಲಾಗಿದೆ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ಹಜ್ಜ್ ನಿರ್ವಹಿಸುವುದು ಮತ್ತು ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು."
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಸ್ಲಾಂ ಧರ್ಮವನ್ನು ಐದು ಸ್ತಂಭಗಳಿಂದ ಎತ್ತಿಹಿಡಿಯಲಾದ ಬಲಿಷ್ಠ ಕಟ್ಟಡಕ್ಕೆ ಹೋಲಿಸಿದ್ದಾರೆ. ಇಸ್ಲಾಂ ಧರ್ಮದ ಇತರ ಬೋಧನೆಗಳು ಈ ಕಟ್ಟಡದ ಪರಿಪೂರ್ಣತೆಯಂತೆ ಕಾರ್ಯನಿರ್ವಹಿಸುತ್ತವೆ. ಈ ಸ್ತಂಭಗಳಲ್ಲಿ ಮೊದಲನೆಯದು: ಎರಡು ಸಾಕ್ಷ್ಯವಚನಗಳು. ಅಂದರೆ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುವುದು, ಇವೆರಡು ಒಂದೇ ಸ್ತಂಭವಾಗಿದೆ. ಏಕೆಂದರೆ ಅವುಗಳನ್ನು ಪರಸ್ಪರ ಬೇರ್ಪಡಿಸಲಾಗುವುದಿಲ್ಲ. ದಾಸನು ಅಲ್ಲಾಹನ ಏಕತೆಯನ್ನು ಮತ್ತು ಆರಾಧನೆಗೆ ಅವನು ಮಾತ್ರ ಅರ್ಹನೆಂದು ಒಪ್ಪಿಕೊಂಡು, ಅದರ ಪ್ರಕಾರ ಕರ್ಮಗಳನ್ನು ಮಾಡುವ, ಮತ್ತು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರ ಪ್ರವಾದಿತ್ವದಲ್ಲಿ ವಿಶ್ವಾಸವಿಟ್ಟು ಅವರನ್ನು ಅನುಸರಿಸುವ ದೃಢನಿಶ್ಚಯದೊಂದಿಗೆ ಈ ಎರಡು ವಚನಗಳನ್ನು ಉಚ್ಛರಿಸುತ್ತಾನೆ. ಎರಡನೆಯ ಸ್ತಂಭ: ನಮಾಝ್ ಸಂಸ್ಥಾಪಿಸುವುದು. ಅಂದರೆ ದಿನ-ರಾತ್ರಿಗಳಲ್ಲಿ ನಿರ್ವಹಿಸಲಾಗುವ ಫಜ್ರ್, ಝುಹರ್, ಅಸರ್, ಮಗ್ರಿಬ್ ಮತ್ತು ಇಶಾ ಎಂಬ ಐದು ಕಡ್ಡಾಯ ನಮಾಝ್‌ಗಳನ್ನು ಅವುಗಳ ಷರತ್ತುಗಳು, ಸ್ತಂಭಗಳು ಮತ್ತು ಕಡ್ಡಾಯಗಳನ್ನು ಪಾಲಿಸಿ ನಿರ್ವಹಿಸುವುದು. ಮೂರನೆಯ ಸ್ತಂಭ: ಕಡ್ಡಾಯ ಝಕಾತ್ (ದಾನ) ನೀಡುವುದು. ಇದೊಂದು ಆರ್ಥಿಕ ಆರಾಧನೆಯಾಗಿದ್ದು, ಧರ್ಮಶಾಸ್ತ್ರದಲ್ಲಿ ನಿರ್ದೇಶಿಸಿದಂತೆ ಒಂದು ನಿಗದಿತ ಪ್ರಮಾಣವನ್ನು ತಲುಪಿದ ಸಂಪತ್ತಿನ ಒಂದು ಭಾಗವನ್ನು ಕಡ್ಡಾಯವಾಗಿ ಅದರ ಅರ್ಹ ಫಲಾನುಭವಿಗಳಿಗೆ ನೀಡುವುದು. ನಾಲ್ಕನೆಯ ಸ್ತಂಭ: ಹಜ್ಜ್ ನಿರ್ವಹಿಸುವುದು. ಅಂದರೆ, ಅಲ್ಲಾಹನ ಆರಾಧನೆ ಸಲ್ಲಿಸುವುದಕ್ಕಾಗಿ ಹಜ್ಜ್ ಕರ್ಮಗಳನ್ನು ನಿರ್ವಹಿಸಲು ಮಕ್ಕಾಗೆ ತೆರಳುವುದು. ಐದನೆಯ ಸ್ತಂಭ: ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು. ಅಂದರೆ, ಅಲ್ಲಾಹನಿಗೆ ಆರಾಧನೆ ಸಲ್ಲಿಸುವ ಸಂಕಲ್ಪದೊಂದಿಗೆ, ಪ್ರಭಾತದಿಂದ ಸೂರ್ಯಾಸ್ತದ ತನಕ ಆಹಾರ, ಪಾನೀಯ ಮುಂತಾದ ಉಪವಾಸವನ್ನು ಅಸಿಂಧುಗೊಳಿಸುವ ವಸ್ತುಗಳಿಂದ ದೂರವಿರುವುದು.

Hadeeth benefits

  1. ಎರಡು ಸಾಕ್ಷ್ಯವಚನಗಳು ಅವಿಭಾಜ್ಯವಾಗಿವೆ. ಒಂದನ್ನು ಹೊರತುಪಡಿಸಿ ಇನ್ನೊಂದನ್ನು ಮಾತ್ರ ಸ್ವೀಕರಿಸಿದರೆ ಅದು ಸಿಂಧುವಾಗುವುದಿಲ್ಲ. ಆದ್ದರಿಂದಲೇ ಅವುಗಳನ್ನು ಒಂದೇ ಸ್ತಂಭವಾಗಿ ಪರಿಗಣಿಸಲಾಗಿದೆ.
  2. ಎರಡು ಸಾಕ್ಷ್ಯವಚನಗಳು ಧರ್ಮದ ಅಡಿಪಾಯವಾಗಿವೆ. ಅವುಗಳ ಅಭಾವದಲ್ಲಿ ಯಾವುದೇ ಮಾತು-ಕರ್ಮಗಳನ್ನು ಸ್ವೀಕಾರವಾಗುವುದಿಲ್ಲ.