/ ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಗಳು, ಅವರು ಅಲ್ಲಾಹನನ್ನು ಭೇಟಿಯಾಗುವವರೆಗೂ ಸ್ವತಃ ಅವರಲ್ಲಿ, ಅವರ ಮಕ್ಕಳಲ್ಲಿ ಮತ್ತು ಅವರ ಸಂಪತ್ತಿನಲ್ಲಿ ಪರೀಕ್ಷೆಗಳು ಸಂಭವಿಸುತ್ತಲೇ ಇರುತ್ತವೆ; ಎಲ್ಲಿಯವರೆಗೆಂದರೆ, ಅವರು ಸಂಪೂರ್ಣ ಪಾಪರಹಿತರಾಗುವ ತನಕ...

ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಗಳು, ಅವರು ಅಲ್ಲಾಹನನ್ನು ಭೇಟಿಯಾಗುವವರೆಗೂ ಸ್ವತಃ ಅವರಲ್ಲಿ, ಅವರ ಮಕ್ಕಳಲ್ಲಿ ಮತ್ತು ಅವರ ಸಂಪತ್ತಿನಲ್ಲಿ ಪರೀಕ್ಷೆಗಳು ಸಂಭವಿಸುತ್ತಲೇ ಇರುತ್ತವೆ; ಎಲ್ಲಿಯವರೆಗೆಂದರೆ, ಅವರು ಸಂಪೂರ್ಣ ಪಾಪರಹಿತರಾಗುವ ತನಕ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಗಳು, ಅವರು ಅಲ್ಲಾಹನನ್ನು ಭೇಟಿಯಾಗುವವರೆಗೂ ಸ್ವತಃ ಅವರಲ್ಲಿ, ಅವರ ಮಕ್ಕಳಲ್ಲಿ ಮತ್ತು ಅವರ ಸಂಪತ್ತಿನಲ್ಲಿ ಪರೀಕ್ಷೆಗಳು ಸಂಭವಿಸುತ್ತಲೇ ಇರುತ್ತವೆ; ಎಲ್ಲಿಯವರೆಗೆಂದರೆ, ಅವರು ಸಂಪೂರ್ಣ ಪಾಪರಹಿತರಾಗುವ ತನಕ."
رواه الترمذي وأحمد

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹನ ಸತ್ಯವಿಶ್ವಾಸಿ ದಾಸ ಮತ್ತು ದಾಸಿಯರಿಗೆ ಪರೀಕ್ಷೆಗಳು ಸಂಭವಿಸುತ್ತಲೇ ಇರುತ್ತವೆ. ಅದು ಸ್ವತಃ ಅವರಲ್ಲೇ ಆಗಿರಬಹುದು, ಅಂದರೆ ಅವರ ಆರೋಗ್ಯ ಅಥವಾ ದೇಹದಲ್ಲಾಗಿರಬಹುದು. ಅವರ ಮಕ್ಕಳಲ್ಲಾಗಿರಬಹುದು, ಅಂದರೆ ಮಕ್ಕಳ ಅನಾರೋಗ್ಯ, ಸಾವು, ಅವಿಧೇಯತೆ ಮುಂತಾದವುಗಳಲ್ಲಿ ಆಗಿರಬಹುದು. ಅವರ ಸಂಪತ್ತಿನಲ್ಲಾಗಿರಬಹುದು, ಅಂದರೆ ಬಡತನ, ವ್ಯಾಪಾರ ನಷ್ಟ, ಕಳ್ಳತನ, ಜೀವನದ ಜಂಜಾಟ ಮತ್ತು ಇಕ್ಕಟ್ಟು ಮುಂತಾದವುಗಳಲ್ಲಿ ಆಗಿರಬಹುದು. ಇವು ಎಲ್ಲಿಯವರೆಗೆ ಸಂಭವಿಸುತ್ತವೆಯೆಂದರೆ, ಅಲ್ಲಾಹು ಆ ಪರೀಕ್ಷೆಗಳ ಮೂಲಕ ಅವರ ಎಲ್ಲಾ ಪಾಪಗಳನ್ನು ಅಳಿಸಿ, ಅವರು ತಮ್ಮ ಎಲ್ಲಾ ಪಾಪ-ದೋಷಗಳಿಂದ ಶುದ್ಧರಾಗಿ ಅಲ್ಲಾಹನನ್ನು ಭೇಟಿಯಾಗುವ ತನಕ.

Hadeeth benefits

  1. ಅಲ್ಲಾಹನಿಗೆ ತನ್ನ ಸತ್ಯವಿಶ್ವಾಸಿ ದಾಸರ ಮೇಲಿರುವ ಕರುಣೆಯಿಂದಾಗಿ ಅವನು ಇಹಲೋಕದ ಸಂಕಷ್ಟ ಮತ್ತು ವಿಪತ್ತುಗಳ ಮೂಲಕ ಅವರು ಮಾಡಿದ ಪಾಪಗಳನ್ನು ಅಳಿಸುತ್ತಾನೆ.
  2. ಸತ್ಯವಿಶ್ವಾಸವಿದ್ದರೆ ಕೇವಲ ಪರೀಕ್ಷೆಗಳಿಂದ ಪಾಪಗಳು ನಿವಾರಣೆಯಾಗುತ್ತವೆ. ಇನ್ನು ದಾಸನು ಕೋಪಗೊಳ್ಳದೆ ಪರೀಕ್ಷೆಗಳನ್ನು ತಾಳ್ಮೆಯಿಂದ ಸ್ವೀಕರಿಸಿದರೆ ಅವನಿಗೆ ಅದಕ್ಕಾಗಿ ಪ್ರತಿಫಲ ಕೂಡ ದೊರೆಯುತ್ತದೆ.
  3. ಇಷ್ಟವಿರುವ ಮತ್ತು ಇಷ್ಟವಿಲ್ಲದ ಎಲ್ಲಾ ವಿಷಯಗಳಲ್ಲೂ ತಾಳ್ಮೆಯಿಂದಿರಲು ಪ್ರೋತ್ಸಾಹಿಸಲಾಗಿದೆ. ಅಲ್ಲಾಹು ಕಡ್ಡಾಯಗೊಳಿಸಿದ್ದನ್ನು ನಿರ್ವಹಿಸಲು ತಾಳ್ಮೆ ವಹಿಸಬೇಕಾಗಿದೆ. ಹಾಗೆಯೇ ಅವನು ನಿಷೇಧಿಸಿದ್ದನ್ನು ತೊರೆಯಲು ಕೂಡ ತಾಳ್ಮೆ ವಹಿಸಬೇಕಾಗಿದೆ. ತಾಳ್ಮೆಯ ಸಂದರ್ಭದಲ್ಲಿ ಅಲ್ಲಾಹನ ಪ್ರತಿಫಲವನ್ನು ನಿರೀಕ್ಷಿಸಬೇಕು ಮತ್ತು ಅವನ ಶಿಕ್ಷೆಯನ್ನು ಭಯಪಡಬೇಕು.
  4. "ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಗಳು" ಎಂದು ಹೇಳುವಾಗ "ಸತ್ಯವಿಶ್ವಾಸಿನಿಗಳು" ಎಂಬ ಪದವನ್ನು ಸೇರಿಸಲಾಗಿದೆ. ಇದು ಈ ವಿಷಯದಲ್ಲಿ ಮಹಿಳೆಯರಿಗೆ ಒತ್ತು ಕೊಡಲಾಗಿದೆ ಎಂಬುದನ್ನು ಸೂಚಿಸುತ್ತದೆ. ವಾಸ್ತವವಾಗಿ, "ಸತ್ಯವಿಶ್ವಾಸಿ" ಎಂದು ಹೇಳುವಾಗ ಅದರಲ್ಲಿ ಮಹಿಳೆಯರು ಕೂಡ ಒಳಪಡುತ್ತಾರೆ. ಈ ಪದವು ಪುರುಷರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯರಿಗೆ ಪರೀಕ್ಷೆಗಳು ಸಂಭವಿಸಿದರೆ, ಅವರ ಪಾಪಗಳು ಮತ್ತು ದೋಷಗಳು ನಿವಾರಣೆಯಾಗುತ್ತವೆ ಎಂದು ಅವರಿಗೂ ವಾಗ್ದಾನ ಮಾಡಲಾಗಿದೆ.
  5. ಪರೀಕ್ಷೆಗಳಿಗಿರುವ ಶ್ರೇಷ್ಠ ಪ್ರತಿಫಲವನ್ನು ತಿಳಿದರೆ, ಪದೇ ಪದೇ ನೋವುಗಳನ್ನು ಅನುಭವಿಸುವುದು ಮನುಷ್ಯನಿಗೆ ಕಷ್ಟವಾಗುವುದಿಲ್ಲ.