/ “ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ; ನನ್ನ ಸಮಾಧಿಯನ್ನು ಉತ್ಸವ ಸ್ಥಳವಾಗಿ ಮಾಡಬೇಡಿ; ನನ್ನ ಮೇಲೆ ಸ್ವಲಾತ್ ಹೇಳಿರಿ, ನೀವು ಎಲ್ಲಿದ್ದರೂ ನಿಶ್ಚಯವಾಗಿಯೂ ನಿಮ್ಮ ಸ್ವಲಾತ್ ನನ್ನನ್ನು ತಲುಪುತ್ತದೆ.”...

“ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ; ನನ್ನ ಸಮಾಧಿಯನ್ನು ಉತ್ಸವ ಸ್ಥಳವಾಗಿ ಮಾಡಬೇಡಿ; ನನ್ನ ಮೇಲೆ ಸ್ವಲಾತ್ ಹೇಳಿರಿ, ನೀವು ಎಲ್ಲಿದ್ದರೂ ನಿಶ್ಚಯವಾಗಿಯೂ ನಿಮ್ಮ ಸ್ವಲಾತ್ ನನ್ನನ್ನು ತಲುಪುತ್ತದೆ.”...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ; ನನ್ನ ಸಮಾಧಿಯನ್ನು ಉತ್ಸವ ಸ್ಥಳವಾಗಿ ಮಾಡಬೇಡಿ; ನನ್ನ ಮೇಲೆ ಸ್ವಲಾತ್ ಹೇಳಿರಿ, ನೀವು ಎಲ್ಲಿದ್ದರೂ ನಿಶ್ಚಯವಾಗಿಯೂ ನಿಮ್ಮ ಸ್ವಲಾತ್ ನನ್ನನ್ನು ತಲುಪುತ್ತದೆ.”
رواه أبو داود

ವಿವರಣೆ

ಮನೆಗಳಲ್ಲಿ ನಮಾಝ್ ಮಾಡದಿರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ವಿರೋಧಿಸುತ್ತಾರೆ. ಏಕೆಂದರೆ ಮನೆಯಲ್ಲಿ ನಮಾಝ್ ಮಾಡದಿದ್ದರೆ ಅದು ಸಮಾಧಿಯಾಗಿ ಮಾರ್ಪಡುತ್ತದೆ. ಸಮಾಧಿಯು ನಮಾಝ್ ಮಾಡುವ ಸ್ಥಳವಲ್ಲ. ತಮ್ಮ ಸಮಾಧಿಗೆ ಪದೇ ಪದೇ ಭೇಟಿ ನೀಡುವುದನ್ನು ಮತ್ತು ರೂಢಿಯಾಗಿ ಅಲ್ಲಿ ಒಟ್ಟುಗೂಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ. ಏಕೆಂದರೆ ಅದು ಬಹುದೇವಾರಾಧನೆಗೆ ಕಾರಣವಾಗುವ ಸಾಧ್ಯತೆಯಿದೆ. ಅವರ ಮೇಲೆ ಸ್ವಲಾತ್ ಮತ್ತು ಸಲಾಂ ಹೇಳಲು ಆದೇಶಿಸಿದ್ದಾರೆ. ಅದನ್ನು ಭೂಮಿಯ ಯಾವುದೇ ಭಾಗದಿಂದ ಹೇಳಬಹುದು. ಹತ್ತಿರದಿಂದ ಹೇಳಿದರೂ, ದೂರದಿಂದ ಹೇಳಿದರೂ ಅದು ಅವರಿಗೆ ತಲುಪುತ್ತದೆ. ಸಲಾಂ ಹೇಳುವುದಕ್ಕಾಗಿ ಪದೇ ಪದೇ ಅವರ ಸಮಾಧಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ.

Hadeeth benefits

  1. ಮನೆಗಳನ್ನು ಆರಾಧನಾಮುಕ್ತಗೊಳಿಸುವುದನ್ನು ಅವರು ವಿರೋಧಿಸಿದ್ದಾರೆ.
  2. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿ ಸಂದರ್ಶನಕ್ಕಾಗಿ ಯಾತ್ರೆ ಮಾಡುವುದನ್ನು ಈ ಹದೀಸಿನಲ್ಲಿ ವಿರೋಧಿಸಲಾಗಿದೆ. ಏಕೆಂದರೆ, ತಮ್ಮ ಮೇಲೆ ಸ್ವಲಾತ್ ಹೇಳಲು ಆದೇಶಿಸಿದಾಗ, ಅದು ತನಗೆ ತಲುಪುತ್ತದೆ ಎಂದು ಅವರು ಹೇಳಿದ್ದಾರೆ. ಅವರ ಮಸೀದಿಯನ್ನು ಸಂದರ್ಶಿಸಲು ಮತ್ತು ಅಲ್ಲಿ ನಮಾಝ್ ನಿರ್ವಹಿಸಲು ಮಾತ್ರ ಯಾತ್ರೆ ಮಾಡಬಹುದು.
  3. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿಯನ್ನು ಉತ್ಸವ ಸ್ಥಳವನ್ನಾಗಿ ಮಾಡುವುದನ್ನು ಈ ಹದೀಸಿನಲ್ಲಿ ನಿಷೇಧಿಸಲಾಗಿದೆ. ಅಂದರೆ ಅವರ ಸಮಾಧಿಯನ್ನು ನಿರ್ದಿಷ್ಟ ವಿಧಾನದಲ್ಲಿ ಮತ್ತು ನಿರ್ದಿಷ್ಟ ಸಮಯದಲ್ಲಿ ನಿರಂತರ ಸಂದರ್ಶಿಸುವುದು. ಈ ವಿಧಿಯು ಎಲ್ಲಾ ಸಮಾಧಿಗಳಿಗೂ ಅನ್ವಯವಾಗುತ್ತದೆ.
  4. ಸರ್ವಶಕ್ತನಾದ ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೀಡಿದ ಗೌರವವನ್ನು ಈ ಹದೀಸಿನಲ್ಲಿ ಕಾಣಬಹುದು. ಎಲ್ಲಾ ಸ್ಥಳ-ಕಾಲಗಳಲ್ಲೂ ಅವರ ಮೇಲೆ ಸ್ವಲಾತ್ ಹೇಳುವುದನ್ನು ಧಾರ್ಮಿಕ ನಿಯಮವನ್ನಾಗಿ ಮಾಡುವ ಮೂಲಕ ಅಲ್ಲಾಹು ಅವರನ್ನು ಗೌರವಿಸಿದ್ದಾನೆ.
  5. ಸಮಾಧಿಗಳ ಬಳಿ ನಮಾಝ್ ಮಾಡಬಾರದೆಂಬ ವಿರೋಧವು ಅವರ ಸಂಗಡಿಗರ ನಡುವೆಯೂ ಜನಜನಿತವಾಗಿತ್ತು ಎಂದು ಈ ಹದೀಸಿನಿಂದ ತಿಳಿಯುತ್ತದೆ. ಈ ಕಾರಣದಿಂದಲೇ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಯಲ್ಲಿ ನಮಾಝ್ ನಿರ್ವಹಿಸದಿದ್ದರೆ ಅದು ಸಮಾಧಿಯಾಗುತ್ತದೆ ಎಂದು ಹೇಳಿದರು. ಏಕೆಂದರೆ ಸಮಾಧಿಗಳ ಬಳಿ ನಮಾಝ್ ಮಾಡುವುದನ್ನು ನಿಷೇಧಿಸಲಾಗಿದೆ.