/ ನಮ್ಮ ಈ ವಿಷಯದಲ್ಲಿ (ಧರ್ಮದಲ್ಲಿ) ಅದರಲ್ಲಿಲ್ಲದ ಒಂದನ್ನು ಯಾರಾದರೂ ಆವಿಷ್ಕರಿಸಿದರೆ, ಅದು ತಿರಸ್ಕೃತವಾಗಿದೆ...

ನಮ್ಮ ಈ ವಿಷಯದಲ್ಲಿ (ಧರ್ಮದಲ್ಲಿ) ಅದರಲ್ಲಿಲ್ಲದ ಒಂದನ್ನು ಯಾರಾದರೂ ಆವಿಷ್ಕರಿಸಿದರೆ, ಅದು ತಿರಸ್ಕೃತವಾಗಿದೆ...

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಮ್ಮ ಈ ವಿಷಯದಲ್ಲಿ (ಧರ್ಮದಲ್ಲಿ) ಅದರಲ್ಲಿಲ್ಲದ ಒಂದನ್ನು ಯಾರಾದರೂ ಆವಿಷ್ಕರಿಸಿದರೆ, ಅದು ತಿರಸ್ಕೃತವಾಗಿದೆ." [ಬುಖಾರಿ ಮತ್ತು ಮುಸ್ಲಿಂ]. ಮುಸ್ಲಿಂರ ವರದಿಯಲ್ಲಿ ಹೀಗಿದೆ: "ನಮ್ಮ ಆಜ್ಞೆಯಿಲ್ಲದ ಒಂದು ಕರ್ಮವನ್ನು ಯಾರಾದರೂ ನಿರ್ವಹಿಸಿದರೆ ಅದು ತಿರಸ್ಕೃತವಾಗಿದೆ."
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಧರ್ಮದಲ್ಲಿ ಹೊಸದಾದ ಒಂದು ಕಾರ್ಯವನ್ನು ಯಾರಾದರೂ ಆವಿಷ್ಕರಿಸಿದರೆ, ಅಥವಾ ಕುರ್‌ಆನ್ ಮತ್ತು ಸುನ್ನತ್‌ನಲ್ಲಿ ಆಧಾರವಿಲ್ಲದ ಒಂದು ಕಾರ್ಯವನ್ನು ಮಾಡಿದರೆ, ಅದು ತಿರಸ್ಕೃತವಾಗಿದೆ. ಅಲ್ಲಾಹು ಅದನ್ನು ಸ್ವೀಕರಿಸುವುದಿಲ್ಲ.

Hadeeth benefits

  1. ಆರಾಧನಾ ಕರ್ಮಗಳು ಕುರ್‌ಆನ್ ಮತ್ತು ಸುನ್ನತ್‌ನ ಮೇಲೆ ಆಧಾರಿತವಾಗಿವೆ. ನಾವು ಅಲ್ಲಾಹನನ್ನು ಅವನು ಕಲಿಸಿಕೊಟ್ಟ ರೀತಿಯಲ್ಲಿ ಆರಾಧಿಸುತ್ತೇವೆಯೇ ಹೊರತು ನೂತನ ಆವಿಷ್ಕಾರಗಳ ಮೂಲಕ ಆರಾಧಿಸುವುದಿಲ್ಲ.
  2. ಧರ್ಮವು ವೈಯುಕ್ತಿಕ ಅಭಿಪ್ರಾಯ ಮತ್ತು ಆದ್ಯತೆಗಳ ಮೇಲೆ ಆಧಾರಿತವಾಗಿಲ್ಲ, ಬದಲಿಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಣೆಯ ಮೇಲೆ ಆಧಾರಿತವಾಗಿದೆ.
  3. ಈ ಹದೀಸ್ ಧರ್ಮದ ಸಂಪೂರ್ಣತೆಯನ್ನು ಸೂಚಿಸುತ್ತದೆ.
  4. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಥವಾ ಅವರ ಸಹಚರರ ಕಾಲದಲ್ಲಿ ಅಸ್ತಿತ್ವದಲ್ಲಿಲ್ಲದ, ಧರ್ಮದಲ್ಲಿ ಹೊಸದಾಗಿ ಪ್ರಾರಂಭಿಸಲಾದ ಎಲ್ಲವೂ ಬಿದ್‌ಅತ್ (ನೂತನ ಆವಿಷ್ಕಾರ) ಆಗಿವೆ. ಅವು ವಿಶ್ವಾಸ, ಮಾತು ಅಥವಾ ಕರ್ಮಗಳಿಗೆ ಸಂಬಂಧಿಸಿದ್ದಾದರೂ ಸಹ.
  5. ಈ ಹದೀಸ್ ಇಸ್ಲಾಂ ಧರ್ಮದ ಮೂಲತತ್ವಗಳಲ್ಲಿ ಒಂದಾಗಿದೆ. ಅದು ಕರ್ಮಗಳ ಮಾನದಂಡವಾಗಿದೆ. ಹೇಗೆ ಅಲ್ಲಾಹನ ಸಂಪ್ರೀತಿಯನ್ನು ಉದ್ದೇಶಿಸದೆ ಮಾಡುವ ಯಾವುದೇ ಕಾರ್ಯವು ಅದನ್ನು ಮಾಡುವವರಿಗೆ ಯಾವುದೇ ಪ್ರತಿಫಲವನ್ನು ನೀಡುವುದಿಲ್ಲವೋ, ಹಾಗೆಯೇ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಂದ ಧರ್ಮಕ್ಕೆ ಅನುಗುಣವಾಗಿಲ್ಲದ ಯಾವುದೇ ಕಾರ್ಯವೂ ಸ್ವೀಕಾರಯೋಗ್ಯವಲ್ಲ.
  6. ಹೊಸ ಆವಿಷ್ಕಾರಗಳನ್ನು ವಿರೋಧಿಸಲಾಗಿರುವುದು ಧರ್ಮಕ್ಕೆ ಸಂಬಂಧಿಸಿ ಮಾತ್ರ. ಲೌಕಿಕ ವಿಷಯಗಳಿಗೆ ಸಂಬಂಧಿಸಿ ವಿರೋಧಿಸಲಾಗಿಲ್ಲ.